Friday 1 July 2011

ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಸಂವಿಧಾನಬಾಹಿರ

ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಿಬ್ಬರ ಆಣೆ ಪ್ರಮಾಣ ಪ್ರಹಸನದ ಬಗ್ಗೆ ಲೇಖನ (ದಿನಾಂಕ ಜೂನ್ 23, 2011)

ಇದೇ ಜೂನ್ 27ರಂದು ಧರ್ಮಸ್ಥಳದಲ್ಲಿ ನಮ್ಮ ಹಾಲೀ ಮತ್ತು ಮಾಜೀ ಮುಖ್ಯಮಂತ್ರಿಗಳಾಗಿರುವ ಯೆಡ್ಯೂರಪ್ಪ ಮತ್ತು ಕುಮಾರಸ್ವಾಮಿಯವರು ಹಿಂದೆ ಜೊತೆಗಿದ್ದುಕೊಂಡು ತಮ್ಮೊಳಗೆ ಮಾಡಿಕೊಂಡ್ಡಿದ್ದ ಮತ್ತು ಬಹುಷಃ ತಮ್ಮಿಬ್ಬರಿಗೆ ಮಾತ್ರ ತಿಳಿದಿರುವ ತಮ್ಮ ತಮ್ಮ ದುರ್ವ್ಯವಹಾರಗಳ ಕುರಿತು ಪ್ರಮಾಣ ವಚನ ಸ್ವೀಕರಿಸುವ ಕಾರ್ಯ ನಡೆಯಲಿದೆ ಎಂಬ ಪ್ರಚಾರ ನಡೆದಿತ್ತು. ಈಗ ಅದರ ಬದಲು ಕೇವಲ ಮನಸ್ಸಾಕ್ಷಿಯಷ್ಟೇ ನಡೆಯುತ್ತದೆ ಎಂಬ ಹೇಳಿಕೆಗಳು ಬರತೊಡಗಿವೆ. ಅವರಿಬ್ಬರ ದುರ್ವ್ಯವಹಾರಗಳೆಲ್ಲವೂ ಬಯಲುಗೊಳ್ಳುವುದೆಂಬ ಭೀತಿಯಿಂದ ಅವರು ಈ ನೆವನವನ್ನು ಮುಂದೊಡ್ಡಿದ್ದಾರೆ ಎಂದು ತೋರುತ್ತದೆ. ಅದಕ್ಕೆ ಪೂರಕವಾಗಿ ಕೆಲವು ಮಠಾಧೀಶರು ತಮ್ಮ ಸಲಹೆಗಳನ್ನು ಕೊಟ್ಟಿರುವುದೂ ಪೂರ್ವ ಯೋಜಿತವೆಂಬಂತೆಯೇ ಭಾಸವಾಗುತ್ತದೆ.

ಧರ್ಮಸ್ಥಳದಲ್ಲಿ ಪ್ರಮಾಣ ಮಾಡುವುದರ ಬಗ್ಗೆ ರಾಷ್ಟ್ರಕವಿ ಕುವೆಂಪುರವರು ಒಂದು ಸುಂದರವಾದ ಮತ್ತು ಅರ್ಥ ಪೂರ್ಣವಾದ ಕವನವನ್ನೇ ಬರೆದಿರುವರು. ಅದು ಪ್ರಸ್ತುತ ಸಂದರ್ಭದಲ್ಲಿ ನೆನಪಿಸುವುದು ಸೂಕ್ತವೆನಿಸುತ್ತಿದೆ. ಕುವೆಂಪುರವರು ಧರ್ಮಸ್ಥಳಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ವೀರೇಂದ್ರ ಹೆಗ್ಡೆಯವರ ಹಿರಿಯರಾದ  ಮಂಜಯ್ಯ ಹೆಗ್ಡೆಯವರು ಆಡಳಿತೆಯನ್ನು ನಡೆಸುತ್ತಿದ್ದರು. ಇಂದಿಗಿಂತಲೂ ಅಂದು ಧರ್ಮಸ್ಥಳದ ಮಹತ್ವದ ಬಗ್ಗೆ ಜನರ ಭೀತಿ ಅಧಿಕವಿತ್ತು. ಧರ್ಮಸ್ಥಳದಲ್ಲಿ ಸಾಮಾನ್ಯ ಜನರು ಆಚರಿಸುತ್ತಿದ್ದ ಹರಕೆ ಸಂದಾಯಗಳ ರೀತಿ ನೀತಿಗಳನ್ನು ಖುದ್ದಾಗಿ ಕಂಡು ಅದು ಅಮಾನವೀಯವೆಂದು ಮನನೊಂದು ಧರ್ಮಸ್ಥಳ ಎಂಬ ಒಂದು ಕವನವನ್ನು ಸ್ಥಳದಲ್ಲೇ ರಚಿಸಿ ಅದನ್ನು ಇಕ್ಷು ಗಂಗೋತ್ರಿ ಎಂಬ ತನ್ನ ಕವನ ಸಂಕಲನದಲ್ಲಿ ಪ್ರಕಟಿಸಿದ್ದಾರೆ. ಅದರ ಕೆಲವು ಸಾಲುಗಳು ಹೀಗಿವೆ:

ಹೃದಯ  ಧರ್ಮಸ್ಥಳದಿ ನಿನ್ನಂತರಾತ್ಮನಿರೆ, ಅಂಜುತಿಹೆ ಏಕೆ?  ..   ..
ಅಲ್ಲಿ ದರ್ಮಸ್ಥಳದಿ ಹೇಳಿಗೆಯ ಹಾವಿನೊಲು, ದೇಗುಲಕೆ ವಶನೆ ಹೇಳ್ ಮಂಜುನಾಥ? 
[ನಿನ್ನ ಅಂತರಾತ್ಮದಲ್ಲಿ ನಿಜವಾಗಿಯೂ ಮಂಜುನಾಥನು ಇರುವುದಾದರೆ ಹಾವಾಡಿಗನ ಹೇಳಿಗೆಯಂತಿರುವ ಧರ್ಮಸ್ಥಳದ ದೇಗುಲದಲ್ಲಿ ಮಂಜುನಾಥ ಬಂಧಿಯಾಗಿರುವನೇನು?]

ನಿನ್ನ  ಭಯದ ಉರಿಗೊಳ್ಳಿ ನಿನಗೆ ಅದುವೇ ಪಂಜುರ್ಲಿ; ನಿನ್ನ ಅಳುಕೇ ನಿನಗೆ ಅಣ್ಣಪ್ಪ ಭೂತ!
[ನಿನ್ನ ಭಯವೆಂಬ ಉರಿಯುವ ಕೊಳ್ಳಿಯೇ ನಿನ್ನನ್ನು ಪಂಜುರ್ಲಿಯಂತೆ ಕಾಡುತ್ತದೆ, ನಿನ್ನ ಅಳುಕೇ ನಿನಗೆ ಅಣ್ಣಪ್ಪ ಭೂತದಂತೆ ಕಾಡುತ್ತದೆ.]

ಎಲ್ಲಿ ಮತ್ಸರವುಅಳಿದು ಮೈತ್ರಿ ಮೂಡುವಲ್ಲಿ ಮೂಡಿತೆಂದೇ ತಿಳಿಯೋ ಧರ್ಮಸ್ಠಳ. ಸುಲಿಗೆ ವಂಚನೆ ಕಳೆದವನ ಮನವೇ ಮಂಜುನಾಥನ ಮಂಚ, ಹೃದಯಕಮಲ!
[ಎಲ್ಲಿ ಮತ್ಸರವು ಆಳಿದು ಗೆಳೆತನವು ಮೂಡುವುದೋ ಅಲ್ಲಿ ನಿಜವಾದ ಧರ್ಮಸ್ಥಳ ಮೂಡುತ್ತದೆ ಎಂದು ತಿಳಿ. ಸುಲಿಗೆ, ವಂಚನೆ, ಹಿಂಸೆಗಳನ್ನು ಕಳೆದವನ ಮನಸ್ಸೇ ಮಂಜುನಾಥನ ಪೀಠ!]

ಮೂಢ ಹೃದಯದ ಗೂಢ ಗಾಢಾಂಧಕಾರವನು ಹೊರ ದೂಡದೆಯೆ ರೂಢಿ ಎಂಬ ನೆವನದಿ ಕಾಣಿಕೆಯ ಹೆಸರಿಟ್ಟು ಕಾಂಚನವನೆಳೆದುಕೊಳೆ ಜ್ಯೋತಿ ಮೂಡುವುದೆಂದೋ ಜಡದ ಜಗದಿ?
[ಮೂಢರ ಹೃದಯಗಳ ನಿಗೂಢ ಗಾಢಾಂಧಕಾರವನ್ನು ಕಾಣಿಕೆ ಎಂಬ ಹೆಸರಲ್ಲಿ ಕಾಂಚನವನ್ನು ಸೆಳೆಯುವ ತಂತ್ರಕ್ಕೆ ಪ್ರೋತ್ಸಾಹ ಕೊಟ್ಟರೆ ಜಗತ್ತಿನಲ್ಲಿ ಜ್ಞಾನ ಜ್ಯೊತಿ ಮೂಡುವುದು ಎಂದು?]

ಹೆಮ್ಮೆಯನು ಬಿಡು, ಹಿರಿಯ! ದಮ್ಮಯ್ಯನಿಡು ಜಿನಗೆ! ನಿನ್ನಂತೆ ಸಂಸ್ಥೆಯೂ ನಶ್ವರವದು!
[ಧರ್ಮಸ್ಥಳದ ಹಿರಿಯನೇ,  ಅಹಂಭಾವವನ್ನು ತೊರೆದು ಜಿನನಿಗೆ ಶರಣಾಗು, ನೀನಾಗಲಿ ನಿನ್ನ ಸಂಸ್ಥೆಯಾಗಲಿ ಶಾಶ್ವತವೇನಲ್ಲ!]

ಧರ್ಮಕ್ಕೆ ಧರ್ಮಸಂಸ್ಥೆಗೆ ನಿಂದೆ ನನದಲ್ಲ; ಧರ್ಮವೇಷದ ಅಧರ್ಮಕ್ಕೆ ಮುನಿದೆ, ನಿಜದ ಧರ್ಮಸ್ಥಳಕೆ ನಿಜದ ಧರ್ಮಕೆ ಇದೆಕೋ ಕೈ ಮುಗಿದೆ, ಮಣಿದೆ, ಹಿರಿದು ಕಿರಿದೆನ್ನದೆ!
[ಧರ್ಮ ಮತ್ತು ಧರ್ಮ ಸಂಸ್ಥೆಗಳಿಗೆ ನಾನು ನಿಂದಿಸುವುದಿಲ್ಲ, ಧರ್ಮದ ಹೆಸರಲ್ಲಿ ನಡೆಯುವ ಅಧರ್ಮಕ್ಕೆ ನನ್ನ ಮುನಿಸು, ನಿಜವಾದ ಧರ್ಮಕ್ಕೆ ನಾನು ತಲೆ ಬಾಗುತ್ತೇನೆ ಮತ್ತು ಕೈ ಮುಗಿಯುತ್ತೇನೆ]

ಇದು ಕುವೆಂಪುರವರ ಶ್ರೇಷ್ಠ ಕವನಗಳಲ್ಲೊಂದು ಎಂದೆನಿಸಿದೆ. ಧರ್ಮಸ್ಥಳದಲ್ಲಿ ಪ್ರಮಾಣ ವಚನ ಸ್ವೀಕರಿಸುವುದು, ಆಣೆ ಇಡುವುದು  ಧರ್ಮದ ಹೆಸರಲ್ಲಿ ನಡೆಯುವ ಅಧರ್ಮವೆಂದೂ, ಜನರನ್ನು ಮೌಡ್ಯಕ್ಕೆ ತಳ್ಳುವ ಕ್ರಿಯೆಯೆಂದೂ ಅರ್ಧ ಶತಮಾನಗಳ ಹಿಂದೆಯೇ ಕುವೆಂಪುರವರು ಸಾರಿದ್ದರು. ಹಾಗಿರುವಾಗ ಜನ ನಾಯಕರೆಂದೆನಿಸಿಕೊಂಡಿರುವ ಯೆಡ್ಯೂರಪ್ಪ ಮತ್ತು ಕುಮಾರಸ್ವಾಮಿಯವರ ಕುಕೃತ್ಯಕ್ಕೆ ಅಸಹ್ಯ ಪಡುತ್ತೇವೆ ಮತ್ತು ಅದನ್ನು ಖಂಡಿಸುತ್ತೇವೆ. ಏನಿದ್ದರೂ ಎಲ್ಲ ಅವ್ಯವಹಾರಗಳನ್ನು ಬಯಲು ಮಾಡುವುದು ಅವರ ಆದ್ಯ ಕರ್ತವ್ಯವಾಗಿದೆ. ಆದುದರಿಂದ ಅವುಗಳನ್ನು ನಮ್ಮ ಸಂವಿಧಾನಕ್ಕನುಗುಣವಾಗಿ ಶಾಸನ ಸಭೆಗಳಲ್ಲಿಯೋ, ನ್ಯಾಯಲಯಗಳಲ್ಲಿಯೋ ಮಂಡಿಸಿ ಸೂಕ್ತ ಕ್ರಮ ಕೈಗೊಳ್ಳುವ ಜವಾಬ್ದಾರಿ ಅವರದ್ದಾಗಿರುತ್ತದೆ. ಮತ್ತು ಇವುಗಳ ಕುರಿತು ಪೂರ್ಣ ಮಾಹಿತಿಯನ್ನು ಪಡೆಯುವ ಹಕ್ಕು ನಾಗರಿಕರಿಗಿದೆ. ಇದಕ್ಕೆ ಅವರು ಬದ್ಧರಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಂಚನೆಯಿಂದ ಪಾಲಿಸುತ್ತಾರೆ ಎಂದು ಹಾರೈಸುತ್ತೇವೆ.

No comments:

Post a Comment